ಕನಕ ಚಿಂತನ ಪ್ರಚಾರೋಪನ್ಯಾಸ ಕಾರ್ಯಕ್ರಮ

ಬಂಟ್ವಾಳ,ದಿ.17: ವಿಜ್ಞಾನದ ಶಕ್ತಿ ಉತ್ತಂಗಕ್ಕೆ ಏರಿ  ಹೋದಾಗ ಅದರ ಇತಿಮಿತಿಗಳನ್ನು ಅರಿತು ಎಷ್ಟು ಬಳಸಬೇಕು ? ಎಷ್ಟು ಬಳಸಬಾರದು ಎಂದು ಅರಿವಿರುತ್ತದೆ. ಆದರೆ ಧರ್ಮದ ಆಚರಣೆಗಳು ಬಂದಾಗ ಅದು ದಿನದಿಂದ ದಿನಕ್ಕೆ ಬೆಳೆಯುತ್ತಲೇ ಇದೆ. ತಾರತಮ್ಯಗಳನ್ನು ಸೃಷ್ಟಿ ಮಾಡುತ್ತಲೇ ಇದೆ. ಧರ್ಮದ ಆಚರಣೆ ಇಂದು ದಾರಿ ತಪ್ಪಿಸುತ್ತದೆ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ರಾಜ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ  ಪ್ರೊ. ಪಿ.ಎಲ್. ಧರ್ಮ ಹೇಳಿದರು.
ಅವರು ಮಂಗಳೂರು ವಿಶ್ವವಿದ್ಯಾನಿಲಯದ ಕನಕ ಪೀಠ ಆಶ್ರಯದಲ್ಲಿ,  ಶ್ರೀರಾಮ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ನಡೆದ ಕನಕ ತತ್ವಚಿಂತನ  ಪ್ರಚಾರೋಪನ್ಯಾಸ ಕಾರ್ಯಕ್ರಮದಲ್ಲಿ ಬಾಗಿಲನ್ನು ತೆರೆದು ಎಂಬ ವಿಷಯದ ಕುರಿತಾಗಿ ಮಾತನಾಡಿದರು.
ಸಾಮಾಜಿಕ ಕ್ರಾಂತಿವೀರ ಕನಕನ ಹಿನ್ನಲೆಯನ್ನು ತಿಳಿಸುತ್ತಾ ದೇವಸ್ಥಾನದ ಪ್ರವೇಶ ಯಾರಿಗೆ ಬೇಕು, ಬೇಡ ? ಯಾರಿಗೆ ನಿಷೇಧ ?, ಅದರಿಂದ ಉಂಟಾಗಬಹುದಾದ  ಚರ್ಚೆಯ ಪರಿಣಾಮವನ್ನು ತಿಳಿಸಿ, ಇಂದಿಗೂ ಕೂಡ ದೇವಸ್ಥಾನ ಪ್ರವೇಶಕ್ಕೆ ಸಮಾನವಾದ ಅವಕಾಶ ಎಲ್ಲರಿಗೂ ಮಾಡಿಕೊಟ್ಟಿಲ್ಲ ಎಂದರು.
ಪ್ರವೇಶವಿರುವವರಿಗೆ ದೇವರ ಜೊತೆ ನೇರ ಸಂಪರ್ಕವಿದೆಯೇ ಎಂಬ ಪ್ರಶ್ನೆಯಿತ್ತು, ಜನ ಪ್ರತಿಯೊಂದು ಕೆಲಸದಲ್ಲಿಯೂ ದೇವರಿದ್ದಾನೆ, ದೇವರು ಸರ್ವಂತರ್ಯಾಮಿ ಎನ್ನುತ್ತೇವೆ ಹಾಗಿದ್ದಲ್ಲಿ ದೇವರನ್ನು ದೇವಸ್ಥಾನ ಕಟ್ಟಿ ಗುಡಿಯೊಳಗೆ ಬಂಧಿಸಿ ಪ್ರವೇಶ ನಿರ್ಬಂಧಗಳನ್ನು ಹೇರುವುದು ಯಾಕೆ ? ಇಂದು ಆಚರಣೆಗೆ  ಸಂಬಂಧಪಟ್ಟ ಮಡಿ ಮೈಲಿಗೆ ಜಾಸ್ತಿಯಾಗುತ್ತದೆ ಎಂದು ತಮ್ಮ ಬದುಕಿನಲ್ಲಾದ ಆಚರಣೆಯ ದುರಂತವನ್ನು ತೆರೆದಿಟ್ಟರು. ಒಂದು ಹೊಸ ಬದುಕಿನ ಚಿತ್ರಣವನ್ನು ತಂದು ಕೊಡುವುದು ಹೊಸ ಸಾಮಾಜೀಕರಣ.  ರಾಜಕಾರಣ ಧರ್ಮದ ಕೆಲಸ. ಆದರೆ ದೇಗುಲ ಪ್ರವೇಶದೊಳಗೆ ರಾಜಕಾರಣವಾಗುತ್ತಿದೆ  ಎಂದರು.
ಇಂದು ಧರ್ಮ ಧರ್ಮವಾಗಿ ಉಳಿದಿಲ್ಲ. ಆಚರಣೆಗಳು ಧರ್ಮವಾಗುತ್ತಿದೆ. ಧರ್ಮ ತಿಳಿದು ತಪ್ಪು ಮಾಡುತ್ತಿದ್ದೇವೆಯೋ ತಿಳಿಯುತ್ತಿಲ್ಲ. ಆಚಾರಕ್ಕೆ ಆಚರಣೆಗೆ ಮನಬಾಗದೆ ಧಾರ್ಮಿಕತೆ, ಧರ್ಮದ ಆಚರಣೆ ಒಗ್ಗೂಡಿಸುತ್ತದೆ ಎಂದು ನಂಬದೇ ಧರ್ಮವನ್ನು ವೈಚಾರಿಕತೆಯಿಂದ ಒಪ್ಪಿಕೊಳ್ಳಬೇಕಾಗಿದೆ ಎಂದರು. ವಿವೇಕಾನಂದರ ಪುಸ್ತಕಗಳು, ಹಿನ್ನಲೆ ಬದುಕಿನ ಬಗ್ಗೆ ನಮ್ಮನ್ನು ಮತ್ತೆ ಮತ್ತೆ ನೆನಪಿಸುತ್ತಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಸಂಸ್ಥೆಯ ಸಂಚಾಲಕರಾದ ಡಾ. ಪ್ರಭಾಕರ ಭಟ್ ಕಲ್ಲಡ್ಕ ಮಾತನಾಡಿ ಅಧ್ಯಾತ್ಮಿಕತೆಯ ಕಡೆಗೆ ಹೋದಾಗ ಈ ಸಮಾಜ ಒಳ್ಳೆಯ ದಾರಿಯತ್ತ ಹೋಗುತ್ತದೆ. ತಾತ, ಮುತ್ತಜ್ಜರು ಮಾಡಿದ ಅಸ್ಪೃಶ್ಯತೆ ಎಂಬ ಗೋಡೆಯನ್ನು ಇಂದಿನ ಜನಾಂಗದವರ ಮಾನಸಿಕ ಪರಿವರ್ತನೆಯನ್ನು  ಮಾಡಿಕೊಳ್ಳುವುದರ ಮೂಲಕ ಹೋಗಲಾಡಿಸಲು ಖಂಡಿತ ಸಾಧ್ಯ ಎಂದರು. ಯುವಜನತೆ  ಈ ದೃಷ್ಟಿಕೋನವನ್ನು ಅತ್ಯಂತ ಗಂಭೀರವಾಗಿ ಮನಸ್ಸಿನಾಳದಿಂದ ಆಲೋಚಿಸಬೇಕಾಗಿದೆ ಎಂದರು. ಜಾತಿ, ಬಣ್ಣದ ಹೆಸರಿನಲ್ಲಿ ವ್ಯತ್ಯಾಸ ಮಾಡುವುದು ಪಾಪವೇ. ಅಸ್ಪೃಶ್ಯತೆ ಇಲ್ಲ ಅಂಥ ಆದರೆ ಭಾರತ ಈ ಜಗತ್ತಿನಲ್ಲಿ ಸರ್ವಶ್ರೇಷ್ಟವಾಗುತ್ತದೆ ಎಂದರು.
ಕನಕ ಸಂಶೋಧನಾ ಅಧ್ಯಯನ ಕೇಂದ್ರದ ಸಂಯೋಜಕರು ಹಾಗೂ ಕನ್ನಡ ವಿಭಾಗದ ಪ್ರಾಧ್ಯಾಪಕರಾದ ಪ್ರೊ.ವಿ. ಶಿವರಾಮ ಶೆಟ್ಟಿ ಮಾತನಾಡಿ, ಸಂಸ್ಥೆಯಲ್ಲಿ ನಡೆಯುವಂತಹ ಪ್ರತಿದಿನ ಸರಸ್ವತಿ ವಂದನೆಯ ಬಗ್ಗೆ  ಹೇಳುತ್ತಾ, ಕನಕನ ಆಶಯಕ್ಕೆ ನೀವು ಧ್ವನಿಗೂಡಿಸಿದ್ದೀರಿ ಬಹಳ ಆಧಾರಿತ ಪೂರ್ಣವಾಗಿ ಸಂಪನ್ನಗೊಂಡ ಧ್ವನಿ ಕೇಂದ್ರದ ಆಶಯಕ್ಕೆ ವಿದ್ಯಾರ್ಥಿ ಸಮುದಾಯ ಒಗ್ಗೂಡಬೇಕಾಗಿದೆ.  ರಾಜಪ್ರಭುತ್ವದಲ್ಲಿದ್ದ ಕಾಲವನ್ನು ಬಿಟ್ಟು ಇಂದು ಪ್ರಜಾಪ್ರಭುತ್ವ ಕಾಲದಲ್ಲಿದ್ದೇವೆ. ಯೋದತ್ವ ಕಳೆದು ದಾಸತ್ವ ಸ್ವೀಕರಿಸಿದ ರಾಜಪ್ರಭುತ್ವದಲ್ಲಿದ್ದ ಕನಕನ ಬಗ್ಗೆ ತಿಳಿದುಕೊಳ್ಳಬೇಕಾಗಿದ್ದ ಕಾಲ ಎಂದರು.. ಜಾತಿಯ ನೆಲೆಯಲ್ಲಿ, ಲಿಂಗದ ನೆಲೆಯಲ್ಲಿ ಒಟ್ಟು ಸೇರುವ ಸನ್ನಿವೇಶಗಳಿಲ್ಲ ಅದು ಈ ಪ್ರಜಾಪ್ರಭುತ್ವದಲ್ಲಿ ಯಾಕೆ ಬೇರೂರಿದೆ? ಎಂದು ವಿದ್ಯಾರ್ಥಿ ಸಮುದಾಯ ತಿಳಿಯುವ ಅಗತ್ಯವಿದೆ. ಈ ದೃಷ್ಟಿಯಿಂದ  ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ ಎಂದು ಪ್ರಸ್ತಾವಿಕ ನುಡಿಗಳಾನ್ನಾಡಿದರು.
ಆ ಸಂದರ್ಭದಲ್ಲಿ ವಿದ್ಯಾರ್ಥಿಗಳಿಂದ ವಿವಿಧ ದಾಸರ ಗೀತೆಗಳು, ಕುಣಿತ ಭಜನೆ ಇನ್ನಿತರ ಸಾಂಸ್ಕೃತಿಕ ಕಾರ‍್ಯಕ್ರಮಗಳು ನಡೆದವು.
ಕಾಲೇಜಿನ ಪ್ರಾಂಶುಪಾಲ ಕೃಷ್ಣಪ್ರಸಾದ್ ಸ್ವಾಗತಿಸಿ, ಉಪನ್ಯಾಸಕಿ ಜಯಲಕ್ಷ್ಮೀ ವಂದಿಸಿ, ವಿದ್ಯಾರ್ಥಿ ಭಾಗ್ಯಶ್ರೀ ಕಾರ‍್ಯಕ್ರಮ ನಿರೂಪಿಸಿದರು.

Leave a Reply